ಹೊಸ ರುಚಿ ಬರೆಯದೇ ಐದು ತಿಂಗಳಾಯಿತು. ಹೀಗೇ ಏನೋ ಕೆಲಸ, ಅದರ ಮಧ್ಯೆ ಬಿಡುವು ಮಾಡಿಕೊಂಡರೂ ಮತ್ತೇನೋ ಕಿರಿಕಿರಿ. ಒಟ್ಟೂ ಐದು ತಿಂಗಳು ಕಳೆದದ್ದೇ ತಿಳಿಯಲಿಲ್ಲ.
ಮಸಾಲೆ ವಡೆ ಮಾಡೋದು ಹೇಗೆ?
ಎರಡು ಮುಷ್ಟಿಯಷ್ಟು ಕಡ್ಲೆಬೇಳೆ, ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆ ನೀರಿನಲ್ಲಿ ನೆನಸಿಡಿ. ಸುಮಾರು ಒಂದುಗಂಟೆಯಷ್ಟು ನೆನೆಯಲಿ. ಉದ್ದಿನಬೇಳೆ ಸ್ವಲ್ಪಕ್ಕಿಂತ ಹೆಚ್ಚಾಗಬಾರದು. ಅನಂತರ ಚೆನ್ನಾಗಿ ತೊಳೆದು ಗ್ರೈಂಡರ್ ನಲ್ಲಾದರೆ ಒಂದೆರಡು ಸುತ್ತು ಸುತ್ತಿ. ಮಿಕ್ಸಿಯಲ್ಲಾದರೂ ಹಾಕಿ ತೆಗೆದರೆ ಸಾಕು.
ಅದಕ್ಕೆ ಶುಂಠಿ, ಕರಿಬೇವು, ಬೇಕಿದ್ದರೆ ಕೊಬ್ಬರಿ-ತೆಂಗಿನಕಾಯಿ ತುಂಡು ಹಾಕಿ.ಇವೆಲ್ಲವೂ ಸಣ್ಣಗೆ ಕತ್ತರಿಸಿರಬೇಕು. ಆಮೇಲೆ ಉಪ್ಪು ಹಾಕಿ ಕಲಸಿ. ಒಲೆಯ ಮೇಲೆ ಇಟ್ಟ ಎಣ್ಣೆ ಹದ ಕಾವು ಬಂದ ಕೂಡಲೇ, ಕಲಸಿಟ್ಟ ಹಿಟ್ಟನ್ನು ಸಣ್ಣ ಸಣ್ಣಗೆ ಉಂಡೆ ಮಾಡಿ, ಕೈಯಲ್ಲಿ ತಟ್ಟಿ ಎಣ್ಣೆಗೆ ಬಿಡಿ. ಕೆಂಪಗಾಗುತ್ತಿದ್ದಂತೆ ತೆಗೆದು ಇಟ್ಟರೆ ಮುಗಿಯಿತು.
ಈರುಳ್ಳಿ ಹಾಕಬೇಕೇ ? ಬೇಡವೇ?
ಈರುಳ್ಳಿ ಸಾಮಾನ್ಯವಾಗಿ ಮಸಾಲೆ ವಡೆಗೆ ಹಾಕುವವರೂ ಇದ್ದಾರೆ, ಹಾಕದೇ ಇದ್ದವರೂ ಇದ್ದಾರೆ. ಹೋಟೆಲ್, ತಿಂಡಿಗಾಡಿಗಳಲ್ಲಿ ಈರುಳ್ಳಿ ಹಾಕುತ್ತಾರೆ. ಆದರೆ, ಈರುಳ್ಳಿ ಹಾಕದಿದ್ದರೆ ಬೇರೆ ರುಚಿ, ಹಾಕಿದರೇ ಬೇರೆ ರುಚಿ.
ಟಿಪ್ಸ್
1. ಈರುಳ್ಳಿ ಹಾಕಿದರೆ ಕಡ್ಲೆಬೇಳೆ ವಡೆ ಗರಿಗರಿಯಾಗಿರದು.
2. ಈರುಳ್ಳಿ ಹಾಕಿದರೆ, ಮಾರನೇ ದಿನ ಇಟ್ಟ ವಡೆ ತಿನ್ನಲು ಕಷ್ಟ.
3. ಈರುಳ್ಳಿ ಹಾಕದಿದ್ದರೆ ಮೂರು ದಿನ ವಡೆ ಇಟ್ಟರೂ ಹಾಳಾಗದು.
4. ಈರುಳ್ಳಿ ಹಾಕದಿದ್ದರೆ, ಸ್ವಲ್ಪ ಇಂಗನ್ನು ಹಾಕಬಹುದು. ಆದರೆ, ಅದೇನೋ ರುಚಿಯಲ್ಲಿ ದೊಡ್ಡ ವ್ಯತ್ಯಾಸವೇನನ್ನೂ ಮಾಡದು. ಇಂಗು, ವಾಯುವಿನ ಅಂಶವನ್ನು ಕೊಲ್ಲುತ್ತದೆ.
5. ಎಣ್ಣೆ ಜೋರಾದ ಕಾವಿರುವುದು ಬೇಡ. ಹದ ಕಾವಿನಲ್ಲಿ ವಡೆ ಕರಿದರೆ, ಚೆನ್ನಾಗಿ ಬೇಯುತ್ತದೆ.
6. ಹಾಗೆಂದು ಬಹಳ ಎಳೆ ಕಾವಿನಲ್ಲಿಟ್ಟರೆ, ಎಣ್ಣೆ ಕುಡಿಯುತ್ತದೆ.
7. ಉದ್ದಿನಬೇಳೆ, ಕಡ್ಲೆಬೇಳೆಯಲ್ಲಿರುವ ಸ್ಟಿಫ್ಟೆಸ್ (ಗಡಸುಗುಣ)ವನ್ನು ಕಡಿಮೆಗೊಳಿಸಿ, ಮೃದುವಾಗಿಸುತ್ತದೆ.
8. ಸಾಮಾನ್ಯವಾಗಿ ಶುಂಠಿ ಹಾಕಿದರೆ, ಇಂಗು ಹಾಕುವುದು ಬೇಡ. ಎರಡಕ್ಕೂ ಘಾಟಿನ ಗುಣವಿದ್ದು, ಒಂದನ್ನು ಮತ್ತೊಂದು ಹತ್ತಿಕ್ಕುತ್ತದೆ.
9. ಬೇಳೆ ಕನಿಷ್ಠ ಒಂದು ಗಂಟೆ ನೆನೆಸಿದರೆ ಸಾಕು, ಅದಕ್ಕಿಂತ ಮೊದಲು ತೆಗೆದರೆ ಬೇಳೆ ಸರಿಯಾಗಿ ಮೃದುವಾಗಿರದು. ಆಗ ಅರೆದರೂ ವಡೆಯಲ್ಲಿ ಕಾಂತಿ ಇರದು.
10. ಇದಕ್ಕೆ ಸೊಪ್ಪು (ಕೊತ್ತಂಬರಿ, ಅರವೆ ಸೊಪ್ಪು) ಇತ್ಯಾದಿಯನ್ನು ಹಾಕಿ ಸೊಪ್ಪಿನ ವಡೆಯನ್ನೂ ಮಾಡಬಹುದು.