Home > ಉಪಾಹಾರ > ಶಾವಿಗೆ ಭಾತ್ ಗೆ ಟಿಪ್ಸ್ ಮತ್ತು ಪಾಕಚಂದ್ರಿಕೆಯ ಬದಲಾದ ವಿಳಾಸ

ಶಾವಿಗೆ ಭಾತ್ ಗೆ ಟಿಪ್ಸ್ ಮತ್ತು ಪಾಕಚಂದ್ರಿಕೆಯ ಬದಲಾದ ವಿಳಾಸ

ಹೌದುರೀ, ಪಾಕಚಂದ್ರಿಕೆಯ ಬಾಗಿಲು ತೆರೆಯದೇ ಹಲವು ಹುಣ್ಣಿಮೆ, ಅಮಾವಾಸ್ಯೆಗಳು ಕಳೆದವು. ಸ್ವಲ್ಪ ಕೆಲಸದ ಒತ್ತಡದಿಂದ ಹೀಗಾಗಿತ್ತು. ಈಗ ಮತ್ತೆ ಬಾಗಿಲು ತೆಗೆದಿದ್ದೇನೆ. ಅಂದ ಹಾಗೆ ನಿಮಗೆ ನೀಡುವ ಮಾಹಿತಿಯೆಂದರೆ ನನ್ನ ಪಾಕಚಂದ್ರಿಕೆಯ ವಿಳಾಸ ಬದಲಾಯಿಸಿದ್ದೇನೆ. ಇನ್ನು ಮುಂದೆ ಬ್ಲಾಗ್ ಸ್ಪಾಟ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದಿಷ್ಟು ವಿನ್ಯಾಸ ಇತ್ಯಾದಿ ಕಾರಣಗಳಿಂದ ಈ ಬದಲಾವಣೆ. ದಯವಿಟ್ಟು ಬನ್ನಿ, ಬರಲು ಮರೆಯಬೇಡಿ. ಸ್ವಲ್ಪ ದಿನ ಇಲ್ಲೂ ಪೋಸ್ಟ್ ಗಳನ್ನು ಹಾಕುತ್ತೇನೆ. ನಂತರ ಅಲ್ಲಿಯೇ…www.pakachandrike.blogspot.com

ಶಾವಿಗೆ ಭಾತ್ ಬಹಳಷ್ಟು ಮಂದಿಗೆ ಗೊತ್ತು. ಬಹಳ ಸುಲಭ ಮತ್ತು ಸರಳ. ಸಾಮಾನ್ಯವಾಗಿ ಎಲ್ಲರೂ ಬಯಸುವುದು ಗೋಧಿ ಶಾವಿಗೆಯನ್ನು ಅಂದರೆ ಬಾಂಬಿನೋ ಇತ್ಯಾದಿ ಬ್ರ್ಯಾಂಡ್ ಗಳು. ಇದನ್ನು ಮಾಡುವಾಗ ಬಹಳಷ್ಟು ಮಂದಿ ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಶಾವಿಗೆ ಕುದಿಯುವ ನೀರಿನಲ್ಲಿ ಎಷ್ಟು ಬೇಯಿಸಬೇಕು ? ಏನೇ ಮಾಡಿದರೂ ಮುದ್ದೆಯಾಗುತ್ತದೆ ? ಸರಿಯಾಗಿ ಉಪ್ಪು ಬೆರೆಯುವುದಿಲ್ಲ ?ಇಲ್ಲವೇ ಒಂದು ಬಗೆಯ ವಾಸನೆ ಇರುತ್ತದೆ…ಇತ್ಯಾದಿ

ಶಾವಿಗೆ ಭಾತು ಮಾಡುವ ಸುಲಭ ವಿಧಾನವೆಂದರೆ :
ಬೇಕಾಗುವ ಸಾಮಾನುಗಳು
ಕಾಲು ಕೆ.ಜಿ. ಶಾವಿಗೆ
ಒಂದು ಕ್ಯಾರೆಟ್
ಒಂದು ಆಲೂಗೆಡ್ಡೆ
ಐದು ಬೀನ್ಸ್
ಎರಡು ಕ್ಯಾಪ್ಸಿಕಂ (ಸಾಧಾರಣ ಗಾತ್ರದ್ದು, ದೊಡ್ಡದಾದರೆ ಒಂದೇ)
ಒಂದು ಲಿಂಬೆಹಣ್ಣು
ಒಗ್ಗರಣೆಗೆ ಸಾಮಾನು (ಕರಿಬೇವು, ಸಾಸಿವೆ, ಕಡ್ಲೇಬೇಳೆ, ಕಡ್ಲೆಕಾಯಿ ಬೀಜ, ಉದ್ದಿನಬೇಳೆ ಇತ್ಯಾದಿ)
ಸ್ವಲ್ಪ ತೆಂಗಿನಕಾಯಿ

ನೀರನ್ನು ಕುದಿಯಲು ಒಲೆಯ ಮೇಲಿಡಿ. ನೀರು ಕುದಿಯಲು ಆರಂಭವಾದಾಗ ಪ್ಯಾಕೆಟ್ ಒಡೆದು ಶಾವಿಗೆಯನ್ನು ಹಾಕಿ. ತಕ್ಷಣವೇ ಒಂದು ಟೀ ಸ್ಪೂನ್ ನಷ್ಟು ಉಪ್ಪನ್ನು ಹಾಕಿ, ಕೊಂಚ ಅರಿಶಿನವನ್ನು ಹಾಕಿ. ಮೂರು ತೊಟ್ಟು ಕೊಬ್ಬರಿ ಎಣ್ಣೆ ಅಥವಾ ಇತರೆ ಎಣ್ಣೆ ಹಾಕಿ. ಇಲ್ಲದಿದ್ದರೆ ಐದಾರು ತೊಟ್ಟು ಲಿಂಬೆಹಣ್ಣಿನ ರಸ ಹಾಕಿ. ಐದಾರು ನಿಮಿಷ ಚೆನ್ನಾಗಿ ಕುದಿಯಲಿ (ಜೋರಾದ ಉರಿಯಲ್ಲಿ). ಸೌಟಿನಲ್ಲಿ ಅದನ್ನು ತಿರುಗಿಸಿ. ಶಾವಿಗೆ ಸ್ವಲ್ಪ ದಪ್ಪಗಾಗುತ್ತಿದ್ದಂತೆ ಜರಡಿ (ತೂತ ಇರುವಂಥ ಪಾತ್ರ ಅಥವಾ ಬೋಂಡಾ ಇತ್ಯಾದಿ ಕರಿದ ಎಣ್ಣೆ ಪದಾರ್ಥಗಳನ್ನು ಹಾಕುವ ಪಾತ್ರ)ಗೆ ಸುರಿದು ಬಿಡಿ.

ಕ್ಯಾರೆಟ್, ಬೀನ್ಸ್, ಆಲೂಗೆಡ್ಡೆಯನ್ನು ಸ್ವಲ್ಪ ತೆಳ್ಳಗೆ ಉದ್ದುದ್ದ (ನಿಮ್ಮ ಬೆರಳಿನ ಮೊದಲನೇ ಭಾಗದಷ್ಟು ಉದ್ದ) ಕತ್ತರಿಸಿಕೊಳ್ಳಿ. ಕ್ಯಾಪ್ಸಿಕಂನ್ನೂ ಹಾಗೆಯೇ ಮಾಡಿಕೊಳ್ಳಿ. ತರಕಾರಿಗಳನ್ನು ಚೈನೀ ರೀತಿಯಲ್ಲೂ ಕತ್ತರಿಸಿಕೊಳ್ಳಬಹುದು. ಅಂದರೆ ಕ್ರಾಸ್ ಕ್ರಾಸ್ ಆಗಿ.

ಉಳಿದಂತೆ ಒಲೆ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಒಗ್ಗರಣೆ ಹಾಕಬೇಕು. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ, ಬೇಳೆ, ಕಡ್ಲೇಬೀಜ ಕೆಂಪಗಾಗಿಸಿ. ನಂತರ ಕರಿಬೇವು ಹಾಕಿ ತರಕಾರಿಗಳನ್ನು ಹಾಕಿ ಸ್ವಲ್ಪ ರೋಸ್ಟ್ ಮಾಡಿ. ಆಮೇಲೆ ಒಂದಿಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಕಿ. ಬಳಿಕ ತೆಂಗಿನಕಾಯಿ ತುರಿ ಹಾಕಿ ತಿರುವಿ. ಕೆಲ ಕ್ಷಣಗಳ ನಂತರ ಶಾವಿಗೆಯನ್ನು ಹಾಕಿ ತಿರುವಿದರೆ ಮುಗಿಯಿತು.

ಒಗ್ಗರಣೆ ಸಂದರ್ಭದಲ್ಲಿ ಗೋಡಂಬಿಯನ್ನೂ ಹಾಕಬಹುದು, ಚೆನ್ನಾಗಿರುತ್ತದೆ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸುತ್ತಲೂ ಹಾಕಬಹುದು. ಅಲಂಕಾರಕ್ಕೆ ಗುಲಾಬಿ ಇಡುವವರೂ ಇದ್ದಾರೆ.

ನಿಮಗೆ ತಿಳಿಸಲೇಬೇಕಾದ ಅಂಶಗಳೆಂದರೆ :
1. ಎಣ್ಣೆಯ ಹನಿಗಳು ಕುದಿಯುವ ನೀರಿಗೆ ಹಾಕಿದರೆ ಶಾವಿಗೆ ಉದುರುಉದುರಾಗುತ್ತದೆ.
2. ಲಿಂಬೆಹಣ್ಣಿನ ಹನಿಗಳನ್ನೂ ಹಾಕುವುದೂ ಅದೇ ಕಾರಣಕ್ಕೆ, ಆದರೆ ಜಾಸ್ತಿ ಹಾಕಿದರೆ ಕಹಿ ಬರುವ ಅಪಾಯವಿದೆ.
3. ಉಪ್ಪು, ಅರಿಶಿನ ಹಾಕುವುದರಿಂದ ಶಾವಿಗೆಯೂ ಉಪ್ಪನ್ನು ಬಣ್ಣವನ್ನು ಹೀರಿಕೊಳ್ಳುತ್ತದೆ. ಆಗ ಚಪ್ಪೆ ಚಪ್ಪೆ ಎನಿಸದು.
4. ಕಡ್ಲೇಬೀಜ ಕೆಂಪಗಾದ ಮೇಲೆ ತರಕಾರಿ ಹಾಕುವುದರಿಂದ ಕಡ್ಲೇಬೀಜ ಗರಂ ಗರಂ ಆಗಿ ಇರದು. ಹಾಗೇ ಇರಬೇಕೆಂದು ಬಯಸುವವರು ಕಡ್ಲೇಬೀಜವನ್ನು ಪ್ರತ್ಯೇಕವಾಗಿ ಹುರಿದು (ಎಣ್ಣೆಯಲ್ಲಿ ಕರಿದು) ಕೊನೆಯಲ್ಲಿ ಶಾವಿಗೆ ಭಾತಿಗೆ ಸೇರಿಸಿಕೊಳ್ಳಬಹುದು.

ಅಕ್ಕಿ ಶಾವಿಗೆಯನ್ನು ಬಳಸಿ. ಅದು ಹೆಚ್ಚು ರುಚಿ. ಡ್ರ್ಯಾಗನ್ ಎಂಬ ಬ್ರ್ಯಾಂಡ್ ನ ಅಕ್ಕಿ ಶಾವಿಗೆ ತಿನ್ನಲು ಬಹಳ ರುಚಿ. ಇಲ್ಲದಿದ್ದರೆ ರವೆಯ ಶಾವಿಗೆ ಬಳಸಿ. ಅದೂ ಸಹ ಬಹಳ ಮುದ್ದೆಯಾಗದು.

  1. chetana chaitanya
    November 5, 2009 at 3:47 am | #1

    But Dragon Shaavige packet mele kudi banda neeranna oleyinda iLisi, adaralli shavige suridu 5 nimisha muchchidi anta baredirtaaralla? haage muchchittaaga nimbe rasa or enne haakabahuda? avaru heLida haage mucchitre saaka or ole mele iDbeka? :(

  2. November 5, 2009 at 9:09 am | #2

    ಡ್ರ್ಯಾಗನ್ ಪ್ಯಾಕೆಟ್ ಮೇಲೆ ಹಾಗೆ ಹಾಕಿರ್ತಾರೆ, ನಿಜ. ಅದು ಕಾರಣ ಅಕ್ಕಿಯ ಶಾವಿಗೆ ಬೇಯಲಿಕ್ಕೆ ಒಂದೆರಡು ನಿಮಿಷ ಜಾಸ್ತಿ ಬೇಕು, ಅದಕ್ಕೆ. ಒಲೆ ಮೇಲೆ ಏಳೆಂಡು ನಿಮಿಷ ಚೆನ್ನಾಗಿ ಕುದಿಸಿದರೆ ಹಾಗೆ ಮುಚ್ಚಿಡಬೇಕಾದ ಅಗತ್ಯವಿಲ್ಲ. ಜತೆಗೆ ನಿಂಬೆಹನಿ ಅಥವಾ ಎಣ್ಣೆ ಹನಿಯನ್ನು ಮುಚ್ಚಿಡುವಾಗ ಹಾಕಿದರೆ ಅಷ್ಟೇನೂ ಪ್ರಯೋಜನವಿಲ್ಲ. ಕಾರಣ, ನೀವು ಹಾಕಿದ ಮೇಲೆ ಒಂದೆರಡು ಸಣ್ಣ ಕುದಿ ಬರಬೇಕು. ಆಗಲೇ ಅದರ ಎಫೆಕ್ಟ್.
    ಧನ್ಯವಾದ
    ನಾವಡ

  1. No trackbacks yet.