ಶಾವಿಗೆ ಭಾತ್ ಗೆ ಟಿಪ್ಸ್ ಮತ್ತು ಪಾಕಚಂದ್ರಿಕೆಯ ಬದಲಾದ ವಿಳಾಸ

November 3, 2009 ನಾವಡ 2 comments

ಹೌದುರೀ, ಪಾಕಚಂದ್ರಿಕೆಯ ಬಾಗಿಲು ತೆರೆಯದೇ ಹಲವು ಹುಣ್ಣಿಮೆ, ಅಮಾವಾಸ್ಯೆಗಳು ಕಳೆದವು. ಸ್ವಲ್ಪ ಕೆಲಸದ ಒತ್ತಡದಿಂದ ಹೀಗಾಗಿತ್ತು. ಈಗ ಮತ್ತೆ ಬಾಗಿಲು ತೆಗೆದಿದ್ದೇನೆ. ಅಂದ ಹಾಗೆ ನಿಮಗೆ ನೀಡುವ ಮಾಹಿತಿಯೆಂದರೆ ನನ್ನ ಪಾಕಚಂದ್ರಿಕೆಯ ವಿಳಾಸ ಬದಲಾಯಿಸಿದ್ದೇನೆ. ಇನ್ನು ಮುಂದೆ ಬ್ಲಾಗ್ ಸ್ಪಾಟ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದಿಷ್ಟು ವಿನ್ಯಾಸ ಇತ್ಯಾದಿ ಕಾರಣಗಳಿಂದ ಈ ಬದಲಾವಣೆ. ದಯವಿಟ್ಟು ಬನ್ನಿ, ಬರಲು ಮರೆಯಬೇಡಿ. ಸ್ವಲ್ಪ ದಿನ ಇಲ್ಲೂ ಪೋಸ್ಟ್ ಗಳನ್ನು ಹಾಕುತ್ತೇನೆ. ನಂತರ ಅಲ್ಲಿಯೇ…www.pakachandrike.blogspot.com

ಶಾವಿಗೆ ಭಾತ್ ಬಹಳಷ್ಟು ಮಂದಿಗೆ ಗೊತ್ತು. ಬಹಳ ಸುಲಭ ಮತ್ತು ಸರಳ. ಸಾಮಾನ್ಯವಾಗಿ ಎಲ್ಲರೂ ಬಯಸುವುದು ಗೋಧಿ ಶಾವಿಗೆಯನ್ನು ಅಂದರೆ ಬಾಂಬಿನೋ ಇತ್ಯಾದಿ ಬ್ರ್ಯಾಂಡ್ ಗಳು. ಇದನ್ನು ಮಾಡುವಾಗ ಬಹಳಷ್ಟು ಮಂದಿ ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಶಾವಿಗೆ ಕುದಿಯುವ ನೀರಿನಲ್ಲಿ ಎಷ್ಟು ಬೇಯಿಸಬೇಕು ? ಏನೇ ಮಾಡಿದರೂ ಮುದ್ದೆಯಾಗುತ್ತದೆ ? ಸರಿಯಾಗಿ ಉಪ್ಪು ಬೆರೆಯುವುದಿಲ್ಲ ?ಇಲ್ಲವೇ ಒಂದು ಬಗೆಯ ವಾಸನೆ ಇರುತ್ತದೆ…ಇತ್ಯಾದಿ

ಶಾವಿಗೆ ಭಾತು ಮಾಡುವ ಸುಲಭ ವಿಧಾನವೆಂದರೆ :
ಬೇಕಾಗುವ ಸಾಮಾನುಗಳು
ಕಾಲು ಕೆ.ಜಿ. ಶಾವಿಗೆ
ಒಂದು ಕ್ಯಾರೆಟ್
ಒಂದು ಆಲೂಗೆಡ್ಡೆ
ಐದು ಬೀನ್ಸ್
ಎರಡು ಕ್ಯಾಪ್ಸಿಕಂ (ಸಾಧಾರಣ ಗಾತ್ರದ್ದು, ದೊಡ್ಡದಾದರೆ ಒಂದೇ)
ಒಂದು ಲಿಂಬೆಹಣ್ಣು
ಒಗ್ಗರಣೆಗೆ ಸಾಮಾನು (ಕರಿಬೇವು, ಸಾಸಿವೆ, ಕಡ್ಲೇಬೇಳೆ, ಕಡ್ಲೆಕಾಯಿ ಬೀಜ, ಉದ್ದಿನಬೇಳೆ ಇತ್ಯಾದಿ)
ಸ್ವಲ್ಪ ತೆಂಗಿನಕಾಯಿ

ನೀರನ್ನು ಕುದಿಯಲು ಒಲೆಯ ಮೇಲಿಡಿ. ನೀರು ಕುದಿಯಲು ಆರಂಭವಾದಾಗ ಪ್ಯಾಕೆಟ್ ಒಡೆದು ಶಾವಿಗೆಯನ್ನು ಹಾಕಿ. ತಕ್ಷಣವೇ ಒಂದು ಟೀ ಸ್ಪೂನ್ ನಷ್ಟು ಉಪ್ಪನ್ನು ಹಾಕಿ, ಕೊಂಚ ಅರಿಶಿನವನ್ನು ಹಾಕಿ. ಮೂರು ತೊಟ್ಟು ಕೊಬ್ಬರಿ ಎಣ್ಣೆ ಅಥವಾ ಇತರೆ ಎಣ್ಣೆ ಹಾಕಿ. ಇಲ್ಲದಿದ್ದರೆ ಐದಾರು ತೊಟ್ಟು ಲಿಂಬೆಹಣ್ಣಿನ ರಸ ಹಾಕಿ. ಐದಾರು ನಿಮಿಷ ಚೆನ್ನಾಗಿ ಕುದಿಯಲಿ (ಜೋರಾದ ಉರಿಯಲ್ಲಿ). ಸೌಟಿನಲ್ಲಿ ಅದನ್ನು ತಿರುಗಿಸಿ. ಶಾವಿಗೆ ಸ್ವಲ್ಪ ದಪ್ಪಗಾಗುತ್ತಿದ್ದಂತೆ ಜರಡಿ (ತೂತ ಇರುವಂಥ ಪಾತ್ರ ಅಥವಾ ಬೋಂಡಾ ಇತ್ಯಾದಿ ಕರಿದ ಎಣ್ಣೆ ಪದಾರ್ಥಗಳನ್ನು ಹಾಕುವ ಪಾತ್ರ)ಗೆ ಸುರಿದು ಬಿಡಿ.

ಕ್ಯಾರೆಟ್, ಬೀನ್ಸ್, ಆಲೂಗೆಡ್ಡೆಯನ್ನು ಸ್ವಲ್ಪ ತೆಳ್ಳಗೆ ಉದ್ದುದ್ದ (ನಿಮ್ಮ ಬೆರಳಿನ ಮೊದಲನೇ ಭಾಗದಷ್ಟು ಉದ್ದ) ಕತ್ತರಿಸಿಕೊಳ್ಳಿ. ಕ್ಯಾಪ್ಸಿಕಂನ್ನೂ ಹಾಗೆಯೇ ಮಾಡಿಕೊಳ್ಳಿ. ತರಕಾರಿಗಳನ್ನು ಚೈನೀ ರೀತಿಯಲ್ಲೂ ಕತ್ತರಿಸಿಕೊಳ್ಳಬಹುದು. ಅಂದರೆ ಕ್ರಾಸ್ ಕ್ರಾಸ್ ಆಗಿ.

ಉಳಿದಂತೆ ಒಲೆ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಒಗ್ಗರಣೆ ಹಾಕಬೇಕು. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ, ಬೇಳೆ, ಕಡ್ಲೇಬೀಜ ಕೆಂಪಗಾಗಿಸಿ. ನಂತರ ಕರಿಬೇವು ಹಾಕಿ ತರಕಾರಿಗಳನ್ನು ಹಾಕಿ ಸ್ವಲ್ಪ ರೋಸ್ಟ್ ಮಾಡಿ. ಆಮೇಲೆ ಒಂದಿಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಕಿ. ಬಳಿಕ ತೆಂಗಿನಕಾಯಿ ತುರಿ ಹಾಕಿ ತಿರುವಿ. ಕೆಲ ಕ್ಷಣಗಳ ನಂತರ ಶಾವಿಗೆಯನ್ನು ಹಾಕಿ ತಿರುವಿದರೆ ಮುಗಿಯಿತು.

ಒಗ್ಗರಣೆ ಸಂದರ್ಭದಲ್ಲಿ ಗೋಡಂಬಿಯನ್ನೂ ಹಾಕಬಹುದು, ಚೆನ್ನಾಗಿರುತ್ತದೆ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸುತ್ತಲೂ ಹಾಕಬಹುದು. ಅಲಂಕಾರಕ್ಕೆ ಗುಲಾಬಿ ಇಡುವವರೂ ಇದ್ದಾರೆ.

ನಿಮಗೆ ತಿಳಿಸಲೇಬೇಕಾದ ಅಂಶಗಳೆಂದರೆ :
1. ಎಣ್ಣೆಯ ಹನಿಗಳು ಕುದಿಯುವ ನೀರಿಗೆ ಹಾಕಿದರೆ ಶಾವಿಗೆ ಉದುರುಉದುರಾಗುತ್ತದೆ.
2. ಲಿಂಬೆಹಣ್ಣಿನ ಹನಿಗಳನ್ನೂ ಹಾಕುವುದೂ ಅದೇ ಕಾರಣಕ್ಕೆ, ಆದರೆ ಜಾಸ್ತಿ ಹಾಕಿದರೆ ಕಹಿ ಬರುವ ಅಪಾಯವಿದೆ.
3. ಉಪ್ಪು, ಅರಿಶಿನ ಹಾಕುವುದರಿಂದ ಶಾವಿಗೆಯೂ ಉಪ್ಪನ್ನು ಬಣ್ಣವನ್ನು ಹೀರಿಕೊಳ್ಳುತ್ತದೆ. ಆಗ ಚಪ್ಪೆ ಚಪ್ಪೆ ಎನಿಸದು.
4. ಕಡ್ಲೇಬೀಜ ಕೆಂಪಗಾದ ಮೇಲೆ ತರಕಾರಿ ಹಾಕುವುದರಿಂದ ಕಡ್ಲೇಬೀಜ ಗರಂ ಗರಂ ಆಗಿ ಇರದು. ಹಾಗೇ ಇರಬೇಕೆಂದು ಬಯಸುವವರು ಕಡ್ಲೇಬೀಜವನ್ನು ಪ್ರತ್ಯೇಕವಾಗಿ ಹುರಿದು (ಎಣ್ಣೆಯಲ್ಲಿ ಕರಿದು) ಕೊನೆಯಲ್ಲಿ ಶಾವಿಗೆ ಭಾತಿಗೆ ಸೇರಿಸಿಕೊಳ್ಳಬಹುದು.

ಅಕ್ಕಿ ಶಾವಿಗೆಯನ್ನು ಬಳಸಿ. ಅದು ಹೆಚ್ಚು ರುಚಿ. ಡ್ರ್ಯಾಗನ್ ಎಂಬ ಬ್ರ್ಯಾಂಡ್ ನ ಅಕ್ಕಿ ಶಾವಿಗೆ ತಿನ್ನಲು ಬಹಳ ರುಚಿ. ಇಲ್ಲದಿದ್ದರೆ ರವೆಯ ಶಾವಿಗೆ ಬಳಸಿ. ಅದೂ ಸಹ ಬಹಳ ಮುದ್ದೆಯಾಗದು.

ನಾನು ಮಾಡೋ ಅಕ್ಕಿ ರೊಟ್ಟಿ

May 21, 2009 ನಾವಡ 15 comments

ಅಕ್ಕಿ ರೊಟ್ಟಿ
ಬಹಳಷ್ಟು ಮಂದಿಗೆ ಅಕ್ಕಿ ರೊಟ್ಟಿ ಮಾಡುವುದೆಂದರೆ ಬಹಳ ರಿಸ್ಕ್. ಅದರರ್ಥ ಬಹಳ ಸಮಯ ಹಿಡಿಯುವ ಕೆಲಸ. ಜತೆಗೆ ರೊಟ್ಟಿ ತೆಳ್ಳಗೆ ನ್ಯೂಸ್ ಪೇಪರ್‌ನಂತೆ ಬಂದರೆ ತಿನ್ನಲಿಕ್ಕೆ ಚೆಂದ. ದಪ್ಪ ಆಗಿಬಿಟ್ಟರೆ ತಿನ್ನಲಿಕ್ಕೆ ಕಷ್ಟ. ಹೀಗೇ ನಾನಾ ಸಮಸ್ಯೆಗಳು.
ಇದರ ಮಧ್ಯೆ ಮತ್ತಷ್ಟು ಕಾಡುವ ಸಮಸ್ಯೆಯೆಂದರೆ ರೊಟ್ಟಿ ತಟ್ಟೋದು ಹೇಗೆ ? ಬಾಳೆ ಎಲೆ ಮೇಲೆ ತಟ್ಟಿದ್ರೆ ಹೇಗೆ ? ನಂದಿನ ಹಾಲಿನ ಕವರ್ ಒಡೆದು ಅಗಲಮಾಡಿ ಅದರ ಮೇಲೆ ತಟ್ಟಿದ್ರೆ, ಹಾಗೆಯೇ ಕಾವಲಿ ತಣ್ಣಗೆ ಆಗುವವರೆಗೆ ಕಾದ ಮೇಲೆ ಅದರಲ್ಲೇ ತಟ್ಟಿದರೆ ಹೇಗೆ…ಇಂಥ ಹಲವು ಪ್ರಶ್ನೆಗಳಿವೆ.
ನಾವೇ ಕಂಡುಕೊಂಡ ಸುಲಭ ವಿಧಾನ ಈಗ ಹೇಳುತ್ತಿದ್ದೇನೆ. ನೋಡಿ, ಪ್ರಯತ್ನ ಪಡಿ. ನಿಜವಾಗಲೂ ಬಹಳ ಸುಲಭವಾದದ್ದು ಹಾಗೂ ಬೇಗ ಆಗುವಂಥದ್ದು.
ಸಾಮಾನು ವಿವರ (ಮೂರ್ನಾಲ್ಕು ಮಂದಿಗೆ ಪ್ರಮಾಣ)
ಮುಕ್ಕಾಲು ಕೆ. ಜಿ. ಅಕ್ಕಿಹಿಟ್ಟು, ಒಂದು ಹಿಡಿ ಚಿರೋಟಿ ರವೆ, ನಾಲ್ಕು ಈರುಳ್ಳಿ, ನಾಲ್ಕು ಹಸಿಮೆಣಸು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಣ್ಣ ತುಂಡು ಶುಂಠಿ, ಕೊಂಚ ಬಿಳಿ ಎಳ್ಳು, ತೆಂಗಿನತುರಿ, ಸ್ವಲ್ಪ ಮಜ್ಜಿಗೆ ಅಥವಾ ಮೊಸರು, . ಇದು ಮೂಲ ವಸ್ತುಗಳು.
ಇದಲ್ಲದೇ, ಇದಕ್ಕೆ ಕ್ಯಾರೆಟ್, ಸ್ವಲ್ಪ ಕೋಸು, ಬೀನ್ಸ್ ಹೀಗೆ ಹಲವು ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಹಾಕಲೂಬಹುದು.

ಅರ್ಚನಾ ಕಳುಹಿಸಿದ ಚಿತ್ರ

ಅರ್ಚನಾ ಕಳುಹಿಸಿದ ಚಿತ್ರ


ಈರುಳ್ಳಿಯನ್ನು ಸಣ್ಣಗೆ ತುಂಡು ಮಾಡಿಕೊಳ್ಳಿ. ಶುಂಠಿಯೂ ಸಣ್ಣಗಾಗಬೇಕು. ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ಹಸಿಮೆಣಸಿನ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅರ್ಧ ತೆಂಗಿನಕಾಯಿಯನ್ನು ತುರಿದು ಹಾಕಿಕೊಳ್ಳಿ. ಬೇಕಾದಷ್ಟು ಉಪ್ಪು ಹಾಕಿ. ಮೂರು ಚಮದಷ್ಟು ಬಿಳಿ ಎಳ್ಳನ್ನೂ ಹಾಕಿ ಕಲಸಿಕೊಳ್ಳಿ. ಸ್ವಲ್ಪ ನಾದುವಂತೆ ತಿಕ್ಕಿಕೊಳ್ಳಿ. ನಂತರ ಅದಕ್ಕೆ ಮುಕ್ಕಾಲುಕೆಜಿ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಒಂದು ಮುಷ್ಟಿಯಷ್ಟು ಚಿರೋಟಿ ರವೆ (ಕೇಸರಿಬಾತು ರವೆ) ಹಾಕಿಕೊಳ್ಳಿ. ಒಂದು ಚಿಕ್ಕ ಲೋಟದಷ್ಟು ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಅಲ್ಲಿಗೆ ಹಿಟ್ಟು ಸಿದ್ಧ. ಐದು ನಿಮಿಷ ಹಾಗೆಯೇ ಮುಚ್ಚಿಡಿ.
ತಟ್ಟುವ ವಿಧಾನ
ರೊಟ್ಟಿ ತಟ್ಟೆಗೆ ಎಣ್ಣೆ ಹಚ್ಚಿಕೊಳ್ಳಿ. ಅದಕ್ಕೆ ಒಂದು ಉಂಡೆ ಹಿಟ್ಟನ್ನು ಹಿಟ್ಟು ಕೈಯಲ್ಲೇ ತಟ್ಟುತ್ತಾ ಹೋಗಿ. ಬೇಕಾದರೆ ಕೈ ಬೆರಳಿಗೆ ಸ್ವಲ್ಪ ಎಣ್ಣೆ ಮುಟ್ಟಿಕೊಂಡರೆ ಚೆನ್ನಾಗಿ ತಟ್ಟಬಹುದು. ಅದನ್ನು ಒಲೆಯ ಮೇಲಿಟ್ಟು, ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ. ಸಣ್ಣಗಿನ ಕಾವಿನಲ್ಲೇ ಬೆಂದರೆ, ಒಳ್ಳೆ ಕೆಂಪಗಾಗುತ್ತದೆ. ಅಲ್ಲಿಗೆ ರೊಟ್ಟಿ ತಿನ್ನಲು ಸಿದ್ಧ
ಸುಲಭ ವಿಧಾನ
ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಆ ಎಲೆಯನ್ನು ಮೆಲ್ಲಗೆ ತೆಗೆದು ಮತ್ತೆ ಹೊಸ ರೊಟಿಯನ್ನು ತಟ್ಟಬಹುದು. ಆದರೆ ಮೂರ‍್ನಾಲ್ಕು ರೊಟ್ಟಿ ತಟ್ಟಿದ ನಂತರ ಆ ಎಲೆ ಬಿಸಿ ತಾಗಿ, ತಾಗಿ ಮುದುಡುತ್ತದೆ. ಆಗ ರೊಟ್ಟಿ ಆಕಾರ ಸಣ್ಣದಾಗುತ್ತಾ ಹೋಗುತ್ತದೆ.
ಇನ್ನು ಸ್ವಲ್ಪ ದಪ್ಪಗಿನ ಪ್ಲಾಸ್ಟಿಕ್ ಹಾಳೆಯಲ್ಲಿ ರೊಟ್ಟಿ ತಟ್ಟಿದರೂ, ಅದು ಬಿಸಿಯ ಶಾಖಕ್ಕೆ ಸುತ್ತಲೆಲ್ಲಾ ಕರಗುತ್ತಾ ಹೋಗುತ್ತದೆ. ಕೆಟ್ಟ ವಾಸನೆ, ಅದು ರೊಟ್ಟಿಯ ಹಿಟ್ಟಿನ ಜತೆಗೆ ಸೇರಲೂ ಬಹುದು. ಅದೂ ಬೇಡ.
ಕಾವಲಿಯನ್ನೇ ತಣ್ಣಗೆ ಮಾಡಿ ರೊಟ್ಟಿ ತಟ್ಟುವುದಾದರೆ, ಸಮಯವೂ ಪೋಲು, ಜತೆಗೆ ಗ್ಯಾಸ್ ಪೋಲು. ಯಾಕೆಂದರೆ, ಪ್ರತಿ ಬಾರಿಯೂ ಕಾವಲಿ ತಣ್ಣಗಾಗಲು ಐದು ನಿಮಿಷ ಬೇಕು. ನಂತರ ರೊಟ್ಟಿ ತಟ್ಟಿ ಒಲೆಗೆ ಇಟ್ಟರೆ, ಆ ಕಾವಲಿ ಕಾಯಲಿಕ್ಕೆ ಮತ್ತೆ ಹತ್ತು ನಿಮಿಷ ಬೇಕು. ಇದು ನ್ಯಾಷನಲ್ ವೇಸ್ಟ್
ಹಾಗಾದರೆ ಮಾಡೋದು ಹೇಗೆ
ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂ, ಇಂಡಾಂಲಿಯಂ ತಟ್ಟೆ ಸಿಗುತ್ತದೆ. ದುಂಡಗಿರುವಂಥ ತಟ್ಟೆ. ಇವು ಜೈಲು ತಟ್ಟೆ ಎಂದೇ ಪ್ರಸಿದ್ಧ. ೨೦ ರಿಂದ ೩೦ ರೂ. ನ ತಟ್ಟೆ. ಸಿನಿಮಾಗಳಲ್ಲಿ ಕೈದಿಗಳು ಹಿಡಿದಿರುವ ತಟ್ಟೆಗಳನ್ನು ನೋಡಿರಬಹುದು. ಅಂಥ ಎರಡು ತಟ್ಟೆಯನ್ನು ತಂದಿಟ್ಟುಕೊಳ್ಳಿ. ಇವು ಮುಚ್ಚಳದ ಮಾದರಿಯಲ್ಲಿರುವುದಿಲ್ಲ, ಗಮನಿಸಿ. ನಾನು ಹೇಳುತ್ತಿರುವ ತಟ್ಟೆ, ಸ್ವಲ್ಪ ಗುಂಡಿಯಂತಿರುತ್ತದೆ. ಬೆಂಗಳೂರಿನಲ್ಲಾದ್ರೆ, ಕೆ. ಆರ್. ಮಾರುಕಟ್ಟೆಯಲ್ಲಿ ಲಭ್ಯ.
ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.

ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.


ಹೊಸ ತಟ್ಟೆಗೆ ಹಿಂದಿನ ದಿನವೇ ಕೊಂಚ ಎಣ್ಣೆ ಸವರಿಡಿ. ಬೆಳಗ್ಗೆ ಹಿಟ್ಟು ಕಲಸಿದ ಮೇಲೆ ಒಂದು ತಟ್ಟೆಗೆ ಹಿಟ್ಟು ಹಾಕಿ ತೆಳ್ಳಗೆ (ಎಷ್ಟು ಸಾಧ್ಯವೋ ಅಷ್ಟು) ತಟ್ಟಿ, ಬೇಯಿಸಿ. ಪಕ್ಕದಲ್ಲೇ ಒಂದು ದೊಡ್ಟ ಊಟದ ತಟ್ಟೆಯಲ್ಲಿ ಮುಕ್ಕಾಲು ಎನಿಸುವಷ್ಟು ನೀರು ತುಂಬಿಸಿಡಿ. ನಮ್ಮ ರೊಟ್ಟಿ ತಟ್ಟೆಗಿಂತ ಊಟದ ತಟ್ಟೆ ದೊಡ್ಡದಿರಬೇಕು.
ಒಲೆ ಮೇಲಿಟ್ಟ ಹಿಟ್ಟು ಬೆಂದು ಅದನ್ನು ತೆಗೆದ ಕೂಡಲೇ ಆ ತಟ್ಟೆಯನ್ನು ಈ ಊಟದ ತಟ್ಟೆಯ ನೀರಿನ ಮೇಲೆ ತೇಲಲು ಬಿಡಿ. ಹತ್ತು ಸೆಕೆಂಡುಗಳಲ್ಲಿ ಅದು ತಣ್ಣಗಾಗುತ್ತದೆ. ತಕ್ಷಣವೇ ರೊಟ್ಟಿ ಹಿಟ್ಟು ಹಚ್ಚಿ ಮತ್ತೆ ಬೇಯಿಸಿ. ಹೀಗೇ, ಕಾದ ರೊಟ್ಟಿ ತಟ್ಟೆಯನ್ನು ತಣ್ಣಗೆ ಮಾಡಿಕೊಂಡು ಸುಲಭ ಮತ್ತು ಬೇಗ ರೊಟ್ಟಿ ಮಾಡಬಹುದು. ಇದರಿಂದ ಗ್ಯಾಸೂ ವೇಸ್ಟಾಗುವುದಿಲ್ಲ, ನೀರೂ ವೇಸ್ಟಾಗುವುದಿಲ್ಲ, ಸಮಯವೂ ಪೋಲಾಗುವುದಿಲ್ಲ.
ಅಂದಹಾಗೆ, ನನಗೆ ಚಿತ್ರ ಕಳುಹಿಸಿಕೊಟ್ಟಿದ್ದು ಅರ್ಚನಾ. ಅವರೂ ರೆಸಿಪಿ ಲೋಕದವರೇ. ಅವರಿಗೆ ಥ್ಯಾಂಕ್ಸ್.
ಗಮನಿಸಬೇಕಾದ ಅಂಶ
* ಬಹಳ ನುಣ್ಣಗಿರುವ ಅಕ್ಕಿ ಹಿಟ್ಟು ಕೊಳ್ಳಬೇಡಿ, ಸ್ವಲ್ಪ ರಫ್ (ರವೆಯಷ್ಟು ಅಲ್ಲ) ಆಗಿರಬೇಕು. ರೊಟ್ಟಿ ಚೆನ್ನಾಗಿ ಬರುತ್ತೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಸ್ವಲ್ಪ ತರಿ-ತರಿ ಇದ್ದರೆ ಚೆನ್ನ
* ಮಜ್ಜಿಗೆ ಹಾಕಿದರೆ ರೊಟ್ಟಿ ಮೃದು ಹಾಗೂ ಪರಿಮಳ ಚೆನ್ನಾಗಿರುತ್ತೆ.
* ಒಲೆಯ ಕಾವು ಹದವಾಗಿರಲಿ, ತಟ್ಟೆ ಸುಡುವಷ್ಟು ಬೇಡ.
* ರೊಟ್ಟಿ ಹಿಟ್ಟು ಗಟ್ಟಿಯಾಗಿರುವಾಗ ತಟ್ಟಲು ಸ್ವಲ್ಪ ಕಷ್ಟವೆನಿಸಬಹುದು. ಆದರೆ ರೊಟ್ಟಿ ರೋಸ್ಟ್ ಆಗಿರುತ್ತೆ. ಅದೇ ಸ್ವಲ್ಪ ನೀರಾಗಿ ಹಿಟ್ಟು ಕಲೆಸಿಕೊಂಡರೆ, ನಾರಿನಂತೆ ರೋಸ್ಟಾಗದು.
* ಈ ರೊಟ್ಟಿಗೆ ಕಾಯಿ ಚಟ್ನಿ ಇದ್ದರೆ ಚೆನ್ನ.

ಮಾವಿನಕಾಯಿ ಚಟ್ನಿ ಪುಡಿ

May 8, 2009 ನಾವಡ 2 comments

ಚಟ್ನಿ ಪುಡಿ ಮಾಡುವುದೇನೋ ಹೊಸ ಸಂಗತಿಯಲ್ಲ. ಎಲ್ಲರಿಗೂ ಗೊತ್ತಿದದ್ದೇ. ಸದಾ ಮಾಡಿಟ್ಟುಕೊಳ್ಳಬಹುದಾದ ಪುಡಿ. ಚಪಾತಿ, ಇಡ್ನಿ, ದೋಸೆಗೆಲ್ಲಾ ಚೆನ್ನ. ಪೂರಿಗೂ ಚೆನ್ನವೇ.
ಮಾವಿನಕಾಯಿ-ಹಣ್ಣಿನ ಕಾಲವಿದು. ಅದಕ್ಕಾಗಿ ಮಾವಿನಕಾಯಿ ಚಟ್ನಿ ಪುಡಿಯನ್ನು ಮಾಡಬಹುದು. ತಿನ್ನಲೂ ರುಚಿ, ಖುಷಿ.

50 ಗ್ರಾಂ ಕಡ್ಲೇಬೇಳೆ
50 ಗ್ರಾಂ ಉದ್ದಿನಬೇಳೆ
ಹುಣಸೆಹಣ್ಣಿನ ಪುಡಿ
10 ಒಣಮೆಣಸು
ಸ್ವಲ್ಪ ಸಾಸಿವೆ
ಕರಿಬೇವಿನ ಸೊಪ್ಪಿನ ಎಲೆ
ಎರಡು ಹುಳಿ ಮಾವಿನಕಾಯಿ
ಸ್ವಲ್ಪ ಇಂಗು

ಇಷ್ಟಿದ್ದರೆ ಚಟ್ನಿ ಪುಡಿಗೆ ವೇದಿಕೆ ಸಿದ್ಧ. ಮಾವಿನ ಕಾಯಿ ಸಿಪ್ಪೆ ತೆಗೆದು ತುರಿಯಬೇಕು. ನಂತರ ನೀರಿಗೆ ಉಪ್ಪು ಹಾಕಿ ಕರಗಲು ಬಿಡಿ. ಕೆಲ ಕ್ಷಣಗಳ ನಂತರ ತುರಿದ ಮಾವಿನಕಾಯಿಯನ್ನು ಅದಕ್ಕೆ ಹಾಕಿ. ಮಾರನೆ ದಿನ ಆ ತುರಿಯನ್ನು ತೆಗೆದು ಒಣಗಿಸಿ. ಎರಡು ದಿನ ಹೀಗೆ ಒಣಗಿಸಬೇಕು. ಒಂದುವೇಳೆ ಉಪ್ಪು ಜಾಸ್ತಿ ಹಿಡಿದಿರದಿದ್ದರೆ ಮತ್ತೊಮ್ಮೆ ಉಪ್ಪಿನ ನೀರಿಗೆ ಹಾಕಬಹುದು.

ಕಡ್ಲೇಬೇಳೆ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಬಂಗಾರದ ಬಣ್ಣ ಬರಬೇಕು. ನಂತರ ಒಣಮೆಣಸನ್ನು ಹುರಿದುಕೊಳ್ಳಿ. ಆಮೇಲೆ ಸಾಸಿವೆ ಹಾಕಿ, ಹೊಟ್ಟುತ್ತದೆ. ತಕ್ಷಣವೇ ಕರಿಬೇವಿನಸೊಪ್ಪು ಹಾಕಿ ಪಟ ಪಟ ಎಂದ ಕೂಡಲೇ ತೆಗೆದಿಡಿ. ಬೇಕಾದಷ್ಟು ಉಪ್ಪು, ಸ್ವಲ್ಪ ಇಂಗಿನೊಂದಿಗೆ ಈ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಅದಕ್ಕೆ ಒಣಗಿದ ಮಾವಿನ ತುರಿಯನ್ನು ಬೆರೆಸಿ, ಮತ್ತೊಂದು ಸುತ್ತು ತಿರುಗಿಸಿ. ಸ್ವಲ್ಪ ಸಿಹಿ ಇರಲು, ಬೆಲ್ಲ ಪುಡಿ ಮಾಡಿ ಸೇರಿಸಿ. ಅಲ್ಲಿಗೆ ಮಾವಿನಕಾಯಿ ಚಟ್ನಿಪುಡಿ ಸಿದ್ಧವಾದಂತೆ.

ಗಮನಿಸಬೇಕಾದ ಅಂಶಗಳು
1. ಯಾವುದನ್ನು ಹುರಿಯುವಾಗಲೂ ಎಣ್ಣೆ ಬಳಸಬಾರದು, ಡ್ರೈ ಇರಬೇಕು.
2. ಬೇಳೆಗಳನ್ನು ಬಂಗಾರದಬಣ್ಣ ಬರುವಷ್ಟರಲ್ಲೇ ಕೆಳಗಿಳಿಸಿಕೊಳ್ಳಿ. ಕಾರಣ, ಅದರೊಳಗಿನ ಬಿಸಿ ಕೆಲ ಕ್ಷಣಗಳು ಇರುವುದರಿಂದ ಮೆಲ್ಲಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದುವೇಳೆ ಕೆಂಪು ಬಣ್ಣದವರೆಗೆ ಹುರಿದರೆ, ತಣ್ಣಗಾಗುವಷ್ಟರಲ್ಲಿ ಅದು ಕಂದುಬಣ್ಣಕ್ಕೆ ತಿರುಗುತ್ತದೆ. ಆಗ ಪುಡಿ ಚೆನ್ನಾಗಿರಲಾರದು.
3. ಹೊಟ್ಟಿದ ಸಾಸಿವೆ ಚಟ್ನಿ ಪುಡಿಗೆ ಒಳ್ಳೆಯ ಪರಿಮಳವನ್ನು ತರುತ್ತದೆ.
4. ಮೆಂತ್ಯೆ ಹಾಕುವ ಅಭ್ಯಾಸ ಕೆಲವೆಡೆ ಇದೆ. ಆದರೆ ಮಾವಿನಕಾಯಿ ಹುಳಿಯೊಗರು ಇರುವುದರಿಂದ ಮತ್ತೆ ಮೆಂತ್ಯೆ ಬೇಡ. ಮೆಂತ್ಯೆಯ ಕಹಿ ಮತ್ತು ಒಗರು ಹತ್ತಿರ ಹತ್ತಿರ ಒಂದೇ ಬಗೆಯ ರುಚಿ.

ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

April 23, 2009 ನಾವಡ 2 comments

ಇದು ಬ್ಯಾಚುಲರ್ ಕಿಚನ್ ನ ರೆಸಿಪಿ. ಬ್ರಹ್ಮಚಾರಿ-ಣಿಗಳಿಗಾಗಿಯೇ ಇರುವಂಥದ್ದು. ಮಾಡುವುದು ಸುಲಭವೂ ಮತ್ತು ಅಗ್ಗವೂ…

ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.
ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು.
ಆಗ ಬೆಳ್ಳುಳ್ಳಿ ಅನ್ನ ಮಾಡಿ.
ಹತ್ತು ನಿಮಿಷದ ಕೆಲಸವಷ್ಟೇ. ಹಾಗೆ ಹೋಗಿ, ಹೀಗೆ ಬರೋದ್ರೊಳಗೆ ಮಾಡಿಬಿಡಬಹುದು. ಇದಕ್ಕೆ ಹೆಚ್ಚು ಸಾಮಾನುಗಳೂ ಬೇಕಿಲ್ಲ.

ಎರಡು ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಕರಿಬೇವಿನ ಎಲೆ
ಸಾಸಿವೆ
ಉದ್ದಿನಬೇಳೆ
ಕಡ್ಲೆಬೇಳೆ
ಹಸಿಮೆಣಸು
ಒಣಮೆಣಸು
ಉಪ್ಪು

ಮೊದಲು ಮಾಡಿದ ಅನ್ನವನ್ನು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಿದ್ಧಪಡಿಸಿಟ್ಟುಕೊಳ್ಳಿ. ನಾಲ್ಕು ಹಸಿ ಮೆಣಸು ಸೀಳಿಕೊಳ್ಳಿ.

ಒಗ್ಗರಣೆಗೆ ಎರಡು ಒಣಮೆಣಸು ತುಂಡು ಮಾಡಿಕೊಂಡು, ಒಲೆ ಹಚ್ಚಿ ಬಾಣಲಿ ಇಡಿ (ಪಾತ್ರೆಯೂ ಆದೀತು). ಕಾವು ಸಣ್ಣಗಿರಲಿ. ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಅರ್ಧ ಟೀ ಸ್ಪೂನ್ ಸಾಸಿವೆ ಹಾಕಿ, ಪಟ್ ಪಟ್ ಎಂಬ ಸದ್ದು ಕೇಳುತ್ತಿದ್ದಂತೆ ಬೆಳ್ಳುಳ್ಳಿ ಹಾಕಿ. ಬಂಗಾರದ ಬಣ್ಣಕ್ಕೆ ಬರುತ್ತಿದ್ದಂತೆ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಕಿ. ಕೆಂಪಗಾಗುವಷ್ಟು ಹುರಿಯಿರಿ. ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಆಮೇಲೆ ಉಪ್ಪು ಹಾಕಿ ಅನ್ನವನ್ನು ಹಾಕಿ ಕಲಸಿ. ಅಲ್ಲಿಗೆ ಬೆಳ್ಳುಳ್ಳಿ ಅನ್ನ ಸಿದ್ಧ.

ಇದಕ್ಕೆ ಬೇಕಾದವರು ಲಿಂಬೆಹಣ್ಣಿನ ರಸ ಬೆರೆಸಬಹುದು, ತೆಂಗಿನಕಾಯಿಯ ತುರಿ ಹಾಕಬಹುದು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.

ಮತ್ತೊಂದು ಪ್ರಮುಖ ಸಂಗತಿಯೆಂದರೆ, ಬ್ರಹ್ಮಚಾರಿಗಳ ಮನೆಯಲ್ಲಿ ಅನ್ನ ಉಳಿಯುವುದು ಹೆಚ್ಚು. ಇಂದಿನ ಅನ್ನ ನಾಳೆಗೆ ಉಳಿದಾಗ ತಂಗಳನ್ನ ತಿನ್ನಬೇಕು ಎಂದು ಬೇಸರವಿರುತ್ತದೆ. ಆ ದುಃಖವನ್ನು ಇದು ಹೋಗಲಾಡಿಸುತ್ತದೆ. ಅದಕ್ಕೆ ಅನ್ನ ಉಳಿದರೆ, ಅದಕ್ಕೆ ನೀರು ಹಾಕಿಡಿ. ಅದು ಕೆಟ್ಟು ಹೋಗುವುದಿಲ್ಲ. ಅದೇ ಅನ್ನವನ್ನು ಹಿಂಡಿ ಹಿಂಡಿ ನೀರಿನಾಂಶ ತೆಗೆದು ಬೆಳ್ಳುಳ್ಳಿ ಅನ್ನ ಮಾಡಬಹುದು. ಅದೇ ಹೆಚ್ಚು ರುಚಿ.

ಗಮನವಿಡಬೇಕಾದ ಅಂಶ
ಅನ್ನ ಬಟ್ಟಲಿಗೆ ಹಾಕಿ ತಣ್ಣಗೆ ಮಾಡಿದರೆ ಬೆಳ್ಳುಳ್ಳಿ ಅನ್ನ ಮುದ್ದೆಯಾಗುವುದಿಲ್ಲ.
ಇದಕ್ಕೆ ಶುಂಠಿ ಇತ್ಯಾದಿ ಹಾಕಬೇಡಿ. ಬೆಳ್ಳುಳ್ಳಿ ಮತ್ತು ಶುಂಠಿ ಎರಡರ ಘಾಟು ರುಚಿಯನ್ನೇ ಕೆಡಿಸುತ್ತದೆ.
ತಂಗಳನ್ನ ಎಂದು ಹೀಗಳೆಯಬೇಡಿ, ಬೆಳ್ಳುಳ್ಳಿ ಅನ್ನ ಮಾಡಿ.
ಬಹಳ ಸುಲಭ ಮತ್ತು ಕಡಿಮೆ ಸಮಯ ಹಿಡಿಯುವ ತಿಂಡಿ.

ಗಡಿಬಿಡಿಯ ಬಾಂಬೆ ಸಾಗು

April 17, 2009 ನಾವಡ 3 comments

ಗೆಳೆಯರೇ, ಬಾಂಬೆ ಸಾಗು ಮಾಡೋದು ಗೊತ್ತೇ?

ಇದೂ ಸಹಿತ ಗಡಿಬಿಡಿಯಲ್ಲಿ ಮಾಡೋ ಸೈಡ್ಸ್. ಅದರಲ್ಲೂ ಬ್ಯಾಚುಲರ್‌ಗಳು ಇದ್ದಕ್ಕಿದ್ದಂತೆ ಒಂದು ದಿನ ಗೆಳೆಯರನ್ನೆಲ್ಲಾ ಕೂಡಿಕೊಂಡು ಚಪಾತಿನೋ, ಪೂರಿನೋ ಮಾಡಲಿಕ್ಕೆ ಹೋಗ್ತಾರೆ. ಅದರಲ್ಲೂ ಸಂಸಾರಸ್ಥರ ಮನೆಯಲ್ಲೂ ಈ ಗಡಿಬಿಡಿ ಇದ್ದದ್ದೇ. 

ಯಾರೋ ನೆಂಟರು ಬರ್‍ತಾರೆ, ಪೂರಿನೋ, ದೋಸೆನೋ, ಚಪಾತಿನೋ ಮಾಡಿದಾಗ ಅದಕ್ಕೆ ಏನಾದರೂ ಪಲ್ಲೆ ತರಹ ಮಾಡ್ಬೇಕು. ಸಾಮಾನ್ಯವಾಗಿ ತರಕಾರಿ ಸಾಗುವನ್ನೋ ಬೇರೆ ಏನಾದರೂ ಮಾಡೋಕೆ ಸ್ವಲ್ಪ ಸಮಯ ಬೇಕು, ಕೆಲಸ ಜಾಸ್ತಿ. ಆ ಸಂದರ್ಭದಲ್ಲಿ ಏನ್ ಮಾಡ್ಬಹುದು ಎಂದ್ರೆ ಬಾಂಬೆ ಸಾಗು ಮಾಡ್ಬಹುದು. 

ಮಾಡೋದಂತೂ ಬಹಳ ಸರಳ ಹಾಗೂ ವೆಚ್ಚವೂ ಹೆಚ್ಚಿನದಲ್ಲ. ಅದಕ್ಕೆ ಬೇಕಾಗೋ ಸಾಮಾನುಗಳು ಇಷ್ಟೇ.

 

ಒಂದೆರಡು ಈರುಳ್ಳಿ

ಮೂರು ಆಲೂಗೆಡ್ಡೆ

ಒಂದೆರಡು ಟೊಮೆಟೊ

ಚಿಕ್ಕ ಬೆಳ್ಳುಳ್ಳಿ ಗೆಡ್ಡೆ

ಎರಡು ಟೀ ಸ್ಪೂನ್ ಕಡ್ಲೆಹಿಟ್ಟು

ಅರ್ಧ ಟೀ ಸ್ಪೂನ್ ಅರಿಶಿನ ಪುಡಿ

ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು

ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು

ಚೂರು ಇಂಗು

ಮೂರು ಹಸಿಮೆಣಸು

ಉಪ್ಪು

 

ಇಷ್ಟು ಇದ್ದರೆ ಬಾಂಬೆ ಸಾಗು ರೆಡಿ ಆದಂತೆಯೇ. ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಸಂಜೆ ಹೊತ್ತು ತಿಂಡಿಗೆ ಹೋದರೆ ಕೊಡುವುದು ಇದೇ ಸಾಗು. ರುಚಿಯಾಗಿರುತ್ತೆ. 

ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಅದಕ್ಕಿಂತ ಮುನ್ನ ಆಲೂಗೆಡ್ಡೆಯನ್ನು ಬೇಯಲಿಕ್ಕೆ ಇಡಿ. ಐದು ವಿಷಲ್ ಕೂಗಲಿ, ಬಿಡಿ. ಬೆಳ್ಳುಳ್ಳಿ ಬೀಜಗಳನ್ನು ಸುಲಿದು, ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ. ಟೊಮೆಟೋವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಹಸಿಮೆಣಸನ್ನು ಸೀಳಿಟ್ಟುಕೊಳ್ಳಿ.

ಒಲೆ ಹಚ್ಚಿ, ಅದರ ಮೇಲೆ ಬಾಣಲಿಯಿಟ್ಟು, ಒಗ್ಗರಣೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸಾಸಿವೆ ಹಾಕಿ. ಸಾಸಿವೆ ಪಟ ಪಟ ಎಂದು ಹೊಟ್ಟುವವರೆಗೂ ತಾಳ್ಮೆಯಿಂದ ಕಾಯಿರಿ. ಒಂದೆರಡು ಹೊಟ್ಟುತ್ತಿದ್ದಂತೆ ಹತ್ತು ಕಾಳು ಉದ್ದಿನಬೇಳೆ ಹಾಕಿ ಕೆಂಪಗಾಗಲು ಬಿಡಿ. ನಂತರ ಬೆಳ್ಳುಳ್ಳಿ ಚೂರುಗಳನ್ನು ಹಾಕಿ, ಕೆಂಪಗಾಗಲಿ.

ಬಳಿಕ ಸೀಳಿದ ಹಸಿಮೆಣಸು ಹಾಕಿ, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಹಸಿಮೆಣಸಿನ ಬೆನ್ನ ಮೇಲೆ ಗುಳ್ಳೆ ಗುಳ್ಳೆ ತರಹ ಆಗುತ್ತಿದ್ದಂತೆ (ಚೆನ್ನಾಗಿ ಫ್ರೈ ಆಗಿರುವುದರ ಲಕ್ಷಣ)ಈರುಳ್ಳಿಯನ್ನು ಹಾಕಿ ಹುರಿಯಿರಿ. ಆರಿಶಿನ ಪುಡಿ ಹಾಕಿ. ಕೆಲ ಕ್ಷಣಗಳ ನಂತರ ಟೊಮೆಟೊ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ನೀರನ್ನು ಹಾಕಿ ಕೆಲ ಕ್ಷಣ ಬೇಯಲು ಬಿಡಿ. 

ಬೆಂದ ಆಲೂಗೆಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಈರುಳ್ಳಿ, ಟೊಮೆಟೋ ಬೆಂದಿದೆ ಎಂದೆನಿಸಿದಕೂಡಲೇ ಈ ಪುಡಿ ಮಾಡಿಟ್ಟ ಆಲೂಗೆಡ್ಡೆ ಹಾಕಿ ಕಲಕಿ. ಎರಡು ಚಮಚ (ಟೀ) ದಷ್ಟು ಉಪ್ಪು ಹಾಕಿ ಬೆರೆಸಿ. ಆಗ ಸಣ್ಣ ಕಪ್ ನಲ್ಲಿ ಎರಡು ಟೀ ಚಮಚ ಕಡ್ಲೆಹಿಟ್ಟನ್ನು ನೀರಿನಲ್ಲಿ ಕಲೆಸಿ ಬಾಣಲಿಗೆ ಹಾಕಿ ಕುದಿಯಲು ಬಿಡಿ. ಕೆಲ ಕ್ಷಣಗಳಲ್ಲೇ ಕುದ್ದ ನಂತರ ಅದು ಗಟ್ಟಿಯಾಗುತ್ತದೆ. ಆಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ. ಬಾಂಬೆ ಸಾಗು ಅಂದ್ರೆ ಇದೇ. ಕೆಲವರು ಬೆಳ್ಳುಳ್ಳಿ ಬಳಸುವುದಿಲ್ಲ. ಅಂಥವರು ಬಾಣಲಿಯನ್ನು ಒಲೆಯಿಂದ ಕೆಳಗಿಳಿಸುವ ಮೊದಲು ಸ್ವಲ್ಪ ಇಂಗು ಬೆರೆಸಬೇಕು. 

ಗಮನಿಸತಕ್ಕ ಅಂಶಗಳು

* ಬೆಳ್ಳುಳ್ಳಿ ಅಥವಾ ಇಂಗು ಹಾಕುವುದು, ಆಲೂಗೆಡ್ಡೆಯಲ್ಲಿನ ವಾಯು ಅಂಶವನ್ನು ಹೊಡೆದೋಡಿಸಲು.
* ಕಡ್ಲೆಹಿಟ್ಟನ್ನು ನೀರಿನಲ್ಲಿ ಕಲೆಸಿ ಹಾಕುವುದು ಒಂದು ಬಂಧ (ಕೂಡುಕೊಳ್ಳುವಿಕೆ) ಬರಲೆಂದು. ಇಲ್ಲದಿದ್ದರೆ ಆಲೂಗೆಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಬೇಯಲು ಹಾಕಿದ ನೀರೆಲ್ಲವೂ ಪರಸ್ಪರ ಡೈವೋರ್ಸ್ ಕೊಟ್ಟುಕೊಂಡಂತೆ ಇರುತ್ತದೆ.
* ಮಕ್ಕಳಿರುವ ಮನೆಯಲ್ಲಿ ಯಾವಾಗಲೂ ಹಸಿಮೆಣಸನ್ನು ಸೀಳಿಯೇ ಬಳಸಬೇಕು. ಕಾರಣ, ತೆಗೆದಿಡಲು ಸುಲಭ ಹಾಗೂ ಬಹುಬೇಗ ಖಾರವನ್ನು ಬಿಡುವುದಿಲ್ಲ. ಸಣ್ಣ ಸಣ್ಣ ಹೋಳುಗಳಾಗಿ ಮಾಡಿಕೊಂಡರೆ, ನೀರಿನೊಂದಿಗೆ ಖಾರದ ಅಂಶವನ್ನು ಬಹುಬೇಗ ಬಿಡುತ್ತದೆ.
* ಇಂಗು ಮತ್ತು ಬೆಳ್ಳುಳ್ಳಿ ಎರಡನ್ನೂ ಬಳಸಬೇಡಿ, ಚೆನ್ನಾಗಿರುವುದಿಲ್ಲ.
* ಆಲೂಗೆಡ್ಡೆ ಕೊಂಡುಕೊಳ್ಳುವಾಗ ಸರಿಯಾಗಿ ಆರಿಸಿ, ಕೆಲ ಆಲೂಗೆಡ್ಡೆ ಮೇಲೆ ಹಸಿರು ಬಣ್ಣವಿದ್ದರೆ ಸರಿಯಾಗಿ ಬೇಯುವುದಿಲ್ಲ.